Crime News – ನಡುರಸ್ತೆಯಲ್ಲಿ ಪತಿಯೊಬ್ಬ ತನ್ನ ಪತ್ನಿಗೆ 8 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿರುವ ಅಮಾನುಷ ಘಟನೆ ಆನೇಕಲ್ (Anekal) ತಾಲ್ಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. ಪತ್ನಿಯ ಶೀಲ ಶಂಕಿಸಿದ ಪತಿ ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮೃತ ದುರ್ದೈವಿಯನ್ನು ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿ ಶ್ರೀಗಂಗಾ (29) ಎಂದು ಗುರ್ತಿಸಲಾಗಿದ್ದು, ಆಕೆಯ ಪತಿ ಮೋಹನ್ ಎಂಬಾತನೆ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿರುವ ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. ಎರಡು ಮೂರು ವರ್ಷಗಳ ಹಿಂದೆ ಮೋಹನ್ ತನ್ನ ಸ್ನೇಹಿತನ ಜೊತೆಗೆ ಪತ್ನಿಯ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಗಲಾಟೆ ಮಾಡಿದ್ದ. ಈ ಕಾರಣದಿಂದ ಇಬ್ಬರ ನಡುವೆ ಜಗಳ ಸಹ ನಡೆದಿದ್ದು, ಕಳೆದ 8 ತಿಂಗಳ ಹಿಂದೆ ಇಬ್ಬರೂ ಬೇರೆಯಾಗಿದ್ದರಂತೆ. ಇನ್ನೂ ಕಳೆದ ಮಂಗಳವಾರ (ಫೆಬ್ರವರಿ 04) ರಾತ್ರಿ ಆರೋಪಿ ಮೋಹನ್ ಮಗುವನ್ನು ನೋಡಲು ಪತ್ನಿಯ ಮನೆಗೆ ಬಂದಿದ್ದ. ಈ ಸಮಯದಲ್ಲಿ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ಮೃತಳಾದ ಶ್ರೀಗಂಗಾ ಬುಧವಾರ (ಫೆಬ್ರವರಿ 05) ಬೆಳಿಗ್ಗೆ ಮಗುವನ್ನು ಶಾಲೆಗೆ ಬಿಡಲು ಬೈಕ್ ನಲ್ಲಿ ಬಂದಿದ್ದಳು. ಈ ವೇಳೆ ಅಲ್ಲಿಯೇ ಕಾದು ಕುಳಿತಿದ್ದ ಆರೋಪಿ ಮೋಹನ್ ಆಕೆಯ ಮೇಲೆ ದಾಳಿ ನಡೆಸಿ ಏಳೆಂಟು ಬಾರಿ ಶ್ರೀಗಂಗಾ ಳನ್ನು ಚುಚ್ಚಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೂ ಗಂಭೀರವಾಗಿ ಗಾಯಗೊಂಡ ಶ್ರೀಗಂಗಾಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಇನ್ನೂ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಮೋಹನ್ ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಬೆಂಗಳೂರು ಗ್ರಾಮಾಂತರ ಎಸ್.ಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದು, ಬೆಳಗ್ಗೆ ಹೆಬ್ಬಗೋಡಿ ವ್ಯಾಪ್ತಿಯ ಶಾಲೆಗೆ ಮಗುವನ್ನ ಬಿಡಲು ತಾಯಿ ಬಂದಾಗ ಈ ಘಟನೆ ನಡೆದಿದ್ದು, ಮೃತಳ ಪತಿ ಶಾಲೆಯ ಕಂಪೌಂಡ್ ಬಳಿ ಬಂದು ಚಾಕುವಿನಿಂದ ಇರಿದಿದ್ದಾನೆ. ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಆಸ್ಪತ್ರೆಯಲ್ಲಿ ಗಾಯಾಳು ಮೃತಪಟ್ಟಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದೇವೆ. ಪತಿ ಹಾಗೂ ಆತನ ಸ್ನೇಹಿತ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಪತಿಯ ಸ್ನೇಹಿತನನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಈ ವೇಳೆ ಪತಿಯ ಸ್ನೇಹಿತ ಹಾಗೂ ಮೃತಳ ನಡುವೆ ಸಂಬಂಧ ಇದೆ ಎಂದು ಗಲಾಟೆ ಆಗಿದೆ. ನಂತರ ಪತಿ ಪತ್ನಿ ದೂರವಾಗಿದ್ದರು. ಕಳೆದ ರಾತ್ರಿ ಮಗುವನ್ನ ನೋಡಲು ಬಂದಾಗ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡು ಇಂದು (ಫೆಬ್ರವರಿ 05) ಬೆಳಿಗ್ಗೆ ಚಾಕು ಇರಿದು ಕೊಂದಿದ್ದಾನೆ ಎಂದು ಮಾಹಿತಿ ನೀಡಿದರು.