ಕರ್ನಾಟಕ ರಾಜ್ಯದಲ್ಲಿ ದೇಶ-ವಿದೇಶಿಗರನ್ನು ಸೆಳೆಯುವಂತಹ ಅನೇಕ ಪ್ರಾಕೃತಿಕ ತಾಣಗಳಿವೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ದ ತಾಣ ಎತ್ತಿನ ಭುಜ ಸಹ ಒಂದಾಗಿದೆ. ಅನೇಕ ಪ್ರವಾಸಿಗರಿಗೆ ಈ ತಾಣಕ್ಕೆ ಭೇಟಿ ನೀಡಬೇಕೆಂಬ ಆಸೆಯಿದ್ದೆ ಇರುತ್ತದೆ. ಇದೀಗ ಈ ತಾಣಕ್ಕೆ ಹೋಗುವಂತಹ ಪ್ರವಾಸಿಗರಿಗೆ ಕಹಿ ಸುದ್ದಿಯೊಂದಿದೆ. ಈ ತಾಣಕ್ಕೆ ಪ್ರವೇಶ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಈಗಾಗಲೇ ಮುಂಗಾರು ಆರಂಭವಾಗಿದ್ದು, ಅನೇಕ ಕಡೆ ಗಾಳಿ, ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು ಸೇರಿದಂತೆ ದಕ್ಷಿಣ ಕನ್ನಡದ ಭಾಗಗಳಿಗೆ ಈ ಕಾಲದಲ್ಲಿ ವೆಕೇಷನ್ ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಭಾರಿ ಗಾಳಿ, ಮಳೆ ಹಾಗೂ ಮಂಜಿನ ನಡುವೆಯೇ ಮೂಡಿಗೆರೆಯ ಎತ್ತಿನ ಭುಜದ ಕಿರಿದಾದ ಪ್ರದೇಶಕ್ಕೆ ಟ್ರೆಕ್ಕಿಂಗ್ ಹೋಗುತ್ತಿರುತ್ತಾರೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಸಂಭವಿಸಬಹುದಾದಂತಹ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಟ್ರಕ್ಕಿಂಗ್ ಹೋಗುವ ಮಾರ್ಗದಲ್ಲಿ ಪ್ರವಾಸಿಗರ ಸುರಕ್ಷತಾ ಕಾಮಗಾರಿಗೆ ಅರಣ್ಯ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವೆಗೂ ಎತ್ತಿನ ಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ಕೆಲವು ಪ್ರವಾಸಿ ತಾಣಗಳಿಗೆ ಆನ್ ಲೈನ್ ಟಿಕೆಟ್ ಮೂಲಕ ಭೇಟಿ ನೀಡಬೇಕೆಂಬ ನಿಯಮವನ್ನು ಸಹ ಸರ್ಕಾರ ಜಾರಿ ಮಾಡಿದೆ. ಆದರೂ ಸಹ ಕೆಲವೊಂದು ಕಡೆ ಜನಜಂಗುಳಿ ಹೆಚ್ಚಾಗಿದೆ. ಈ ಕುರಿತು ಸರ್ಕಾರ ಸಹ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಸಹ ನೀಡಿದೆ.
ಕರ್ನಾಟಕದ ಮಲೆನಾಡು ಭಾಗಗಳಲ್ಲಿ ಮಳೆ ಬಂದರೇ ಸಾಕು ಪ್ರವಾಸಿಗರ ದಂಡು ಹೆಚ್ಚಾಗುತ್ತದೆ ಎಂದೇ ಹೇಳಬಹುದಾಗಿದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಪ್ರವಾಸಿ ತಾಣಗಳು ನೈಜ ಸೊಬಗನ್ನು ಅನಾವರಣಗೊಳಿಸುತ್ತವೆ. ಅದೇ ಮಾದರಿಯಲ್ಲಿ ಎತ್ತಿನಭುಜ ತಾಣ ಸಹ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಚಾರಣ ಪ್ರಿಯರಿಗೆ ಈ ತಾಣ ನೆಚ್ಚಿನ ತಾಣವಾಗಿದೆ. ಕಳೆದ ಶನಿವಾರದಿಂದ ಸೋಮವಾರದವರೆಗೆ ಮೂರು ದಿನದಲ್ಲಿ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ರಾಜ್ಯದ ಪ್ರವಾಸಿ ತಾಣಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಪ್ರವೇಶ ಕಲ್ಪಿಸಬೇಕೆಂದು ಸೂಚನೆ ನೀಡಿದ್ದರು.