Balochistan – ಬಲೂಚಿಸ್ತಾನ್ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದೆ! ಹೌದು, ನೀವು ಓದುತ್ತಿರುವುದು ನಿಜ. ಬಲೂಚಿಸ್ತಾನದ ಲೇಖಕ ಮಿರ್ ಯಾರ್ ಬಲೂಚ್ ಸೇರಿದಂತೆ ಹಲವು ನಾಯಕರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಇದೀಗ ಇದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಭಾರತವು ಗಡಿಯಾಚೆಗಿನ ಉಗ್ರರ ನೆಲೆಗಳ ಮೇಲೆ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿರುವ ಈ ಸಂದರ್ಭದಲ್ಲಿ ಬಲೂಚಿಸ್ತಾನದ ಈ ದಿಟ್ಟ ಹೆಜ್ಜೆ ಮಹತ್ವ ಪಡೆದುಕೊಂಡಿದೆ. ಬಲೂಚಿಸ್ತಾನದ ಪರವಾಗಿ ಸದಾ ಧ್ವನಿ ಎತ್ತುವ ಲೇಖಕ ಮತ್ತು ವಕೀಲರಾದ ಮಿರ್ ಯಾರ್ ಬಲೂಚ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ “ರಿಪಬ್ಲಿಕ್ ಆಫ್ ಬಲೂಚಿಸ್ತಾನ್” ಎಂದು ಬರೆದುಕೊಂಡು ಈ ಘೋಷಣೆ ಮಾಡಿದ್ದಾರೆ.

Balochistan – ಭಾರತಕ್ಕೆ ಬಲೂಚ್ ನಾಯಕರ ಮನವಿ
ಮಿರ್ ಯಾರ್ ಬಲೂಚ್ ಅವರು ಭಾರತ ಸರ್ಕಾರಕ್ಕೆ ಮಹತ್ವದ ಮನವಿಯೊಂದನ್ನು ಸಹ ಮಾಡಿದ್ದಾರೆ. ನವದೆಹಲಿಯಲ್ಲಿ ಬಲೂಚಿಸ್ತಾನದ ರಾಯಭಾರಿ ಕಚೇರಿಯನ್ನು ತೆರೆಯಲು ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಪಾಕಿಸ್ತಾನಿ ಸೈನ್ಯವನ್ನು ಬಲೂಚಿಸ್ತಾನದಿಂದ ಕೂಡಲೇ ಹಿಂತೆಗೆದುಕೊಂಡು, ಶಾಂತಿ ಕಾಪಾಡಲು ವಿಶ್ವಸಂಸ್ಥೆಯು ತನ್ನ ಶಾಂತಿಪಾಲನಾ ಪಡೆಗಳನ್ನು ಕಳುಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಇತ್ತೀಚೆಗೆ ಭಾರತವು ಪಾಕ್ ಉಗ್ರರ ವಿರುದ್ಧ ನಡೆಸಿದ “ಆಪರೇಷನ್ ಸಿಂಧೂರ್” ಕಾರ್ಯಾಚರಣೆಯ ನಂತರ ಬಲೂಚಿಸ್ತಾನದಿಂದ ಈ ಘೋಷಣೆ ಹೊರಬಿದ್ದಿರುವುದು ಗಮನಾರ್ಹ.
Balochistan – “ನಾವು ನಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ” – ಮಿರ್ ಯಾರ್ ಬಲೂಚ್
ತಮ್ಮ ಎಕ್ಸ್ ಖಾತೆಯಲ್ಲಿ ಮತ್ತಷ್ಟು ಬರೆದುಕೊಂಡಿರುವ ಮಿರ್ ಯಾರ್ ಬಲೂಚ್, “ಭಯೋತ್ಪಾದಕ ಪಾಕಿಸ್ತಾನದ ಅಂತ್ಯ ಸಮೀಪಿಸುತ್ತಿದೆ. ನಾವು ನಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದೇವೆ. ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರಿ ಕಚೇರಿಯನ್ನು ತೆರೆಯಲು ಭಾರತವನ್ನು ವಿನಂತಿಸುತ್ತೇವೆ. ಮುಂಬೈನ ಜಿನ್ಹಾ ಹೌಸ್ ಅನ್ನು ‘ಬಲೂಚಿಸ್ತಾನ್ ಹೌಸ್’ ಎಂದು ಮರುನಾಮಕರಣ ಮಾಡಬೇಕು” ಎಂದು ಹೇಳಿದ್ದಾರೆ.
Balochistan – ವಿಶ್ವಸಂಸ್ಥೆಗೆ ತುರ್ತು ಮನವಿ
ವಿಶ್ವಸಂಸ್ಥೆಯು ತಕ್ಷಣವೇ ಬಲೂಚಿಸ್ತಾನಕ್ಕೆ ಶಾಂತಿ ಪಡೆಗಳನ್ನು ಕಳುಹಿಸಬೇಕು. ಪಾಕಿಸ್ತಾನದ ಸೇನೆ, ಪೊಲೀಸ್ ಸಿಬ್ಬಂದಿ, ಮಿಲಿಟರಿ ಗುಪ್ತಚರ ದಳ ಮತ್ತು ಶಸ್ತ್ರಾಸ್ತ್ರಗಳು ಸೇರಿದಂತೆ ಎಲ್ಲಾ ಯುದ್ಧ ಸಾಮಗ್ರಿಗಳನ್ನು ಬಿಟ್ಟು ತಕ್ಷಣವೇ ಬಲೂಚಿಸ್ತಾನವನ್ನು ತೊರೆಯುವಂತೆ ವಿಶ್ವಸಂಸ್ಥೆಯು ಪಾಕಿಸ್ತಾನವನ್ನು ಒತ್ತಾಯಿಸಬೇಕು ಎಂದು ಮಿರ್ ಯಾರ್ ಬಲೂಚ್ ಆಗ್ರಹಿಸಿದ್ದಾರೆ.

ಶೀಘ್ರದಲ್ಲೇ ಬಲೂಚಿಸ್ತಾನದ ನೂತನ ಸರ್ಕಾರ
ಬಲೂಚಿಸ್ತಾನದ ಸ್ವಾತಂತ್ರ್ಯ ಸರ್ಕಾರದ ರಾಜ್ಯೋತ್ಸವವು ಶೀಘ್ರದಲ್ಲೇ ನಡೆಯಲಿದೆ. ಬಲೂಚಿಸ್ತಾನದ ಆಡಳಿತವನ್ನು ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ವಿಶೇಷವೆಂದರೆ, ಈ ಸಂಪುಟದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಾಗುವುದು ಎಂದು ಮಿರ್ ಯಾರ್ ಬಲೂಚ್ ತಿಳಿಸಿದ್ದಾರೆ. ಅಲ್ಲದೆ, ಬಲೂಚಿಸ್ತಾನದ ಸರ್ಕಾರ ರಚನೆಯ ಸಂದರ್ಭದಲ್ಲಿ ಮಿತ್ರ ರಾಷ್ಟ್ರಗಳನ್ನು ಆಹ್ವಾನಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಪಾಕ್ ನಾಶಕ್ಕೆ ಬಲೂಚಿಗಳ ಶಪಥ, ಅಗತ್ಯ ನೆರವು ನೀಡುವಂತೆ ಭಾರತಕ್ಕೆ ಬಲೂಚಿಗಳ ಮನವಿ…!
ಪಾಕಿಸ್ತಾನಕ್ಕೆ ಎಚ್ಚರಿಕೆ
ಮಿರ್ ಯಾರ್ ಬಲೂಚ್ ಅವರು ಮತ್ತೊಂದು ಪೋಸ್ಟ್ನಲ್ಲಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. “ಹೇ ನಾ-ಪಾಕಿಸ್ತಾನ! ನಿಮ್ಮ ಬಳಿ ಸೈನ್ಯವಿದ್ದರೆ, ನಮ್ಮ ಬಳಿ ಬಲೂಚ್ನ ಸ್ವತಂತ್ರ ಯೋಧರಿದ್ದಾರೆ. ಈ ಯೋಧರು ನಿಮ್ಮ ವಿರುದ್ಧ ಹೋರಾಟ ಮಾಡುತ್ತಾರೆ” ಎಂದು ಅವರು ಬರೆದಿದ್ದಾರೆ. ಈ ಬೆಳವಣಿಗೆಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಸಾಧ್ಯತೆಗಳಿವೆ. ಬಲೂಚಿಸ್ತಾನದ ಈ ದಿಟ್ಟ ನಿರ್ಧಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.