ಮುಂದೊಂದು ದಿನ ಮರದ ನೆರಳಿಗೂ ದುಡ್ಡು ಕೊಡಬೇಕಾದ ಸ್ಥಿತಿ ಬರಬಹುದು: ಪೂರ್ಣಿಕರಾಣಿ

ಗುಡಿಬಂಡೆ: ಮಾನವನ ಅತಿಯಾಸೆ, ನಗರೀಕರಣದ ಉದ್ದೇಶದಿಂದ ಇಂದು ದಿನೇ ದಿನೇ ಪರಿಸರ ನಾಶವಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆ ತುಂಬಾನೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಂದೊಂದು ದಿನ ಮರದ ನೆರಳಿಗೂ ದುಡ್ಡು ಕೊಡಬೇಕಾದ ಸ್ಥಿತಿ ಬರಬಹುದು ಎಂದು ಪ್ರಾದೇಶಿಕ ಅರಣ್ಯದ ವಲಯ ಅರಣ್ಯಾಧಿಕಾರಿ ಪೂರ್ಣಿಕ ರಾಣಿ ತಿಳಿಸಿದರು.

enviornment day in new public school 1

ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಗರೀಕರಣ, ಆಧುನೀಕರಣದ ನೆಪದಲ್ಲಿ ಅರಣ್ಯವನ್ನು ಹಾಗೂ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಇದರಿಂದ ಮರಗಳ ಹನನ ನಡೆಯುತ್ತಿದೆ. ಪರಿಸರದ ನಾಶದಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುತ್ತವೆ. ಒಂದು ಕಡೆ ಅತಿಯಾದ ಮಳೆಯಿಂದಾಗಿ ಅತಿವೃಷ್ಟಿಯಾದರೇ, ಮತ್ತೊಂದು ಕಡೆ ಮಳೆಯಿಲ್ಲದೇ ಅನಾವೃಷ್ಟಿ ಯಾಗುತ್ತದೆ. ಪರಿಸರ ಮುನಿಸಿಕೊಂಡರೇ ಇಡೀ ಜಗತ್ತೇ ನಾಶವಾಗುತ್ತದೆ. ಕೆಲವು ದಿನಗಳ ಹಿಂದೆ ಸಹ ನಾವೆಲ್ಲರೂ ಬಿಸಿಲಿನ ತಾಪ ಹೇಗಿದೆ ಎಂಬುದನ್ನು ಅರಿತಿದ್ದೇವೆ. ಇದಕ್ಕೆಲ್ಲಾ ಕಾರಣ ಪರಿಸರದ ನಾಶ ಎಂದೇ ಹೇಳಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಣೆ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.

ಬಳಿಕ ನ್ಯೂ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಮಂಜುಳಾ ರಾಜಶೇಖರ್‍ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಪರಿಸರ ನಾಶದಿಂದಾಗುವಂತಹ ದುಷ್ಪರಿಣಾಮಗಳ ಬಗ್ಗೆ ತಾವು ಪಡೆದುಕೊಂಡ ಮಾಹಿತಿಯನ್ನು ಪೋಷಕರಿಗೆ ತಿಳಿಸಬೇಕು. ಜೊತೆಗೆ ತಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಷ್ಟೇಅಲ್ಲದೇ ತಮ್ಮ ಮನೆಯಲ್ಲಿ ಏನಾದರೂ ವಿಶೇಷ ದಿನಗಳಂದು ಸಸಿ ನೆಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.

enviornment day in new public school 0

ಈ ವೇಳೆ ಅರಣ್ಯ ಇಲಾಖೆಯ ಕನಕರಾಜು, ಸಿ.ಆರ್‍.ಪಿ ರಾಜಪ್ಪ, ನ್ಯೂ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಖಲೀಲ್, ಶಿಕ್ಷಕರಾದ ಅಂಬರೀಶ್, ಅನ್ಸರ್‍,  ಫಿರ್ದೋಸ್, ಶ್ರಾವಣಿ, ರೋಹಿಣಿ, ಚೈತ್ರಾ ಸೇರಿದಂತೆ ಹಲವರು ಇದ್ದರು.

Leave a Comment

Your email address will not be published. Required fields are marked *

Scroll to Top