ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸೈಬರ್ ವಂಚಕರ ಬಲೆಗೆ ಸುಶಿಕ್ಷಿತರೇ ಬೀಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಆತಂಕದ ಸಂಗತಿಯಾಗಿದೆ. ಫೇಸ್ಬುಕ್ ಪರಿಚಯವನ್ನೇ ಬಂಡವಾಳವಾಗಿಸಿಕೊಂಡು (Facebook Parcel Scam) ವಿದೇಶಿ ವ್ಯಕ್ತಿಯ ಸೋಗಿನಲ್ಲಿ ಬಂದ ವಂಚಕನೊಬ್ಬ, ಉಡುಪಿ ಜಿಲ್ಲೆಯ ಕುಂದಾಪುರದ 37 ವರ್ಷದ ಮಹಿಳೆಗೆ ಬರೋಬ್ಬರಿ 7.10 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ. ಅಷ್ಟಕ್ಕೂ ನಡೆದಿದ್ದಾರೂ ಏನು ಎಂಬ ವಿಚಾರಕ್ಕೆ ಬಂದರೇ,

Facebook Parcel Scam – ಅಪರಿಚಿತ ವ್ಯಕ್ತಿಯಿಂದ ಬಂದ ಫ್ರೆಂಡ್ ರಿಕ್ವೆಸ್ಟ್ ಮತ್ತು ಸ್ನೇಹದ ನಾಟಕ
ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ದಿವ್ಯಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಫೆಬ್ರವರಿ 4ರಂದು ಫೇಸ್ಬುಕ್ನಲ್ಲಿ “Amadeo Luca” ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಮತ್ತು ಸಂದೇಶ ಬಂದಿತ್ತು. ಆರಂಭದಲ್ಲಿ ಮೆಸೆಂಜರ್ ಹಾಗೂ ವಾಟ್ಸಾಪ್ ಮೂಲಕ ಅತ್ಯಂತ ಆಪ್ತವಾಗಿ ಮಾತನಾಡಿದ ಈ ಅಪರಿಚಿತ ವ್ಯಕ್ತಿ, ತಾನು ವಿದೇಶದಿಂದ ಬೆಲೆಬಾಳುವ ಉಡುಗೊರೆಗಳನ್ನು ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ್ದ.
ಬಂಗಾರ ಮತ್ತು ಡಾಲರ್ ಆಮಿಷವೊಡ್ಡಿದ ಪಾರ್ಸೆಲ್ ಫೋಟೋಗಳು
ಫೆಬ್ರವರಿ 8ರಂದು ವಂಚಕನು ತಾನು ಪಾರ್ಸೆಲ್ (Facebook Parcel Scam) ಕಳುಹಿಸಿರುವುದಾಗಿ ತಿಳಿಸಿ, ಅದರಲ್ಲಿ ಬಂಗಾರದ ಒಡವೆಗಳು, ಐಫೋನ್ ಹಾಗೂ ಸಾವಿರಾರು ಡಾಲರ್ ಹಣವಿದೆ ಎಂದು ಫೋಟೋಗಳನ್ನು ಕಳುಹಿಸಿ ಆಮಿಷವೊಡ್ಡಿದ್ದ. ಈ ಪಾರ್ಸೆಲ್ ದೆಹಲಿ ವಿಮಾನ ನಿಲ್ದಾಣ ತಲುಪಿದೆ ಎಂದು ನಂಬಿಸಲು ಆತನ ತಂಡದ ಇತರ ಸದಸ್ಯರು ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದರು.
ವಿವಿಧ ನೆಪಗಳ ಮೂಲಕ ಹಂತ ಹಂತವಾಗಿ ₹7.10 ಲಕ್ಷ ವಸೂಲಿ
ಪಾರ್ಸೆಲ್ ಬಿಡುಗಡೆ ಮಾಡಲು ವಿಮಾನ ನಿಲ್ದಾಣದ ಶುಲ್ಕ, ತೆರಿಗೆ ಹಾಗೂ ಪ್ರೊಸೆಸಿಂಗ್ ಚಾರ್ಜ್ಗಳ ನೆಪದಲ್ಲಿ ವಂಚಕರು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಸೂಚಿಸಿದರು. ಇದನ್ನು ನಿಜವೆಂದು ನಂಬಿದ ಮಹಿಳೆ NEFT ಮತ್ತು RTGS ಮೂಲಕ ಹಂತ ಹಂತವಾಗಿ ಒಟ್ಟು 7,10,000 ರೂಪಾಯಿಗಳನ್ನು (Facebook Parcel Scam) ವರ್ಗಾಯಿಸಿದ್ದಾರೆ. ಇಷ್ಟೆಲ್ಲಾ ಹಣ ನೀಡಿದರೂ ಪಾರ್ಸೆಲ್ ಕೈಸೇರದೆ, ವಂಚಕರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ.

ಪೊಲೀಸರ ತನಿಖೆ ಮತ್ತು ನಿಮ್ಮ ಸುರಕ್ಷತೆಗಾಗಿ ಟಿಪ್ಸ್
ಸದ್ಯ ಈ ಪ್ರಕರಣ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು (Facebook Parcel Scam) ನೆನಪಿಡಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:
- ಯಾರನ್ನೂ ಸುಮ್ಮನೆ ನಂಬಬೇಡಿ: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ವ್ಯಕ್ತಿಗಳು ಬೆಲೆಬಾಳುವ ಉಡುಗೊರೆ ಕಳುಹಿಸುತ್ತಾರೆ ಎಂಬ ಆಮಿಷಕ್ಕೆ ಬಲಿಯಾಗಬೇಡಿ. Read this also : ಜಗಿತ್ಯಾಲದಲ್ಲಿ ಕಿರಾತಕನ ವಿಕೃತಿ: ಬುರ್ಖಾ ತೊಟ್ಟು ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್!
- ಕಸ್ಟಮ್ಸ್ ನಿಯಮ ತಿಳಿಯಿರಿ: ಸರ್ಕಾರಿ ಅಧಿಕಾರಿಗಳು ಅಥವಾ ಕಸ್ಟಮ್ಸ್ ಇಲಾಖೆಯವರು ಎಂದಿಗೂ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಕೇಳುವುದಿಲ್ಲ.
- ಹಣ ವರ್ಗಾವಣೆಗೂ ಮುನ್ನ ಯೋಚಿಸಿ: ಅಪರಿಚಿತರು ಕೇಳಿದ (Facebook Parcel Scam) ತಕ್ಷಣ ಹಣ ಕಳುಹಿಸುವ ಸಾಹಸಕ್ಕೆ ಕೈ ಹಾಕಬೇಡಿ. ಅದು ಎಷ್ಟೇ ತುರ್ತು ಎಂದು ಅವರು ಹೇಳಿದರೂ ಸರಿ.
ನೆನಪಿಡಿ: ಸೈಬರ್ ವಂಚನೆಗೆ ಒಳಗಾದ ತಕ್ಷಣ ವಿಳಂಬ ಮಾಡದೆ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ www.cybercrime.gov.in ಮೂಲಕ ದೂರು ನೀಡಿ.
