ಕೌಟುಂಬಿಕ ಕಲಹಗಳು ಎಷ್ಟರಮಟ್ಟಿಗೆ ವಿಕೋಪಕ್ಕೆ ಹೋಗಬಹುದು ಎನ್ನುವುದಕ್ಕೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹೆಂಡತಿ ಬಿಟ್ಟು ಹೋದಳೆಂಬ ಆಕ್ರೋಶಕ್ಕೆ ತಂದೆಯೊಬ್ಬ ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ (Crime News) ಘಟನೆ ಮರಿಕಲ್ ಮಂಡಲದ ತಿಲೇರು ಗ್ರಾಮದಲ್ಲಿ ನಡೆದಿದೆ.

Crime – ಹತ್ತು ವರ್ಷದ ಸಂಸಾರದಲ್ಲಿ ಬಿರುಕು
ಮರಿಕಲ್ ಮಂಡಲದ ತಿಲೇರು ಗ್ರಾಮದ ನಿವಾಸಿ ಶಿವರಾಮುಲು ಮತ್ತು ದೊಡ್ಡಜೆಟ್ರಂ ಗ್ರಾಮದ ಸುಜಾತ ಅವರ ವಿವಾಹ ಸುಮಾರು ಹತ್ತು ವರ್ಷಗಳ ಹಿಂದೆ ನಡೆದಿತ್ತು. ಇವರಿಗೆ ಎಂಟು ವರ್ಷದ ಮಗಳು ರಿತ್ವಿಕಾ ಮತ್ತು ಐದು ವರ್ಷದ ಮಗ ಚೈತನ್ಯ ಎಂಬ ಇಬ್ಬರು ಮಕ್ಕಳಿದ್ದರು. ಆರಂಭದಲ್ಲಿ ಸುಖವಾಗಿದ್ದ ಸಂಸಾರದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಬಿರುಕು ಕಾಣಿಸಿಕೊಂಡಿತ್ತು. ಗಲಾಟೆ ತಾರಕಕ್ಕೇರಿ ಸುಜಾತ ತನ್ನ ಮಕ್ಕಳನ್ನು ಮತ್ತು ಗಂಡನನ್ನು ಬಿಟ್ಟು ತವರಿಗೆ ಹೋಗಿದ್ದರು. ಅಷ್ಟೇ ಅಲ್ಲದೆ, ಎರಡು ವರ್ಷಗಳ ಹಿಂದೆ ಈ ದಂಪತಿ ಕಾನೂನುಬದ್ಧವಾಗಿ ವಿಚ್ಛೇದನವನ್ನೂ ಪಡೆದಿದ್ದರು.
ಆಸ್ಪತ್ರೆಗೆಂದು ಕರೆದೊಯ್ದು ಕಾಲುವೆಗೆ ಎಸೆದ!
ವಿಚ್ಛೇದನದ ನಂತರ ಶಿವರಾಮುಲು ಮಕ್ಕಳನ್ನು ತನ್ನ ಬಳಿಯೇ ಇರಿಸಿಕೊಂಡು ಸಾಕಿ ಸಲಹುತ್ತಿದ್ದ. ಆದರೆ ಹೆಂಡತಿ ದೂರವಾದ ನೋವು ಅವನನ್ನು ಸದಾ ಕಾಡುತ್ತಿತ್ತು ಎನ್ನಲಾಗಿದೆ. ಸೋಮವಾರ ರಾತ್ರಿ ಮಕ್ಕಳಿಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಶಿವರಾಮುಲು ಮಕ್ಕಳನ್ನು ಹೊಲದ ಕಡೆಗೆ ಕರೆದೊಯ್ದಿದ್ದಾನೆ. ಹೊಲದ ಬಳಿ ಹೋದ ಮೇಲೆ ಶಿವರಾಮುಲು ಮದ್ಯ ಸೇವಿಸಿದ್ದಾನೆ. ಬಳಿಕ ಕ್ರೌರ್ಯ ಮೆರೆದ ಆತ, ತನ್ನಿಬ್ಬರು ಮಕ್ಕಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ (Crime News) ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಮಕ್ಕಳ ಶವಗಳನ್ನು ಹತ್ತಿರದ ಕೋಯಿಲ್ ಸಾಗರ್ ಉಪ ಕಾಲುವೆಗೆ ಎಸೆದಿದ್ದಾನೆ.
ತಂದೆಯ ಆತ್ಮಹತ್ಯೆ ಯತ್ನ
ಮಕ್ಕಳನ್ನು ಕೊಂದ ನಂತರ ಶಿವರಾಮುಲು ತಾನೂ ಸಾಯಲು ನಿರ್ಧರಿಸಿದ. ಕ್ರಿಮಿನಾಶಕ ಸೇವಿಸಿ, ಗಂಟಲು ಕುಯ್ದುಕೊಂಡು, ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತ ಕೂಡಲೇ ತನ್ನ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಾಲುವೆಯಿಂದ ಮಕ್ಕಳ ಶವಗಳನ್ನು ಹೊರತೆಗೆದಿದ್ದಾರೆ. ಅಷ್ಟರಲ್ಲಾಗಲೇ ಮಕ್ಕಳಿಬ್ಬರು ಮೃತಪಟ್ಟಿದ್ದರು. ಗಂಭೀರ (Crime News) ಸ್ಥಿತಿಯಲ್ಲಿದ್ದ ಶಿವರಾಮುಲುನನ್ನು ಮೊದಲು ಮಹಬೂಬ್ ನಗರ ಜಿಲ್ಲಾ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಕಂದರಾಬಾದ್ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read this also : ಪ್ರಿಯತಮೆಯೊಂದಿಗೆ ಸುತ್ತಾಡುತ್ತಿದ್ದ ಪತಿಯನ್ನು ರೆಡ್ಹ್ಯಾಂಡ್ ಆಗಿ ಹಿಡಿದ ಪತ್ನಿ; ಆಮೇಲೆ ನಡೆದಿದ್ದೇ ಬೇರೆ!
ಗ್ರಾಮದಲ್ಲಿ ಶೋಕದ ಛಾಯೆ
ತನ್ನ ಆಕ್ರೋಶಕ್ಕೆ ತಂದೆಯೇ ಮಕ್ಕಳನ್ನು ಬಲಿಪಡೆದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಅಮಾಯಕ ಮಕ್ಕಳ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಗಮನಿಸಿ: ಜೀವನದಲ್ಲಿ ಏನೇ ಕಷ್ಟಗಳಿದ್ದರೂ ಆತ್ಮಹತ್ಯೆ ಅಥವಾ ಹಿಂಸೆ ಯಾವುದಕ್ಕೂ ಪರಿಹಾರವಲ್ಲ. ಮಾನಸಿಕ ಒತ್ತಡವಿದ್ದರೆ ತಜ್ಞರ ನೆರವು ಪಡೆಯಿರಿ.
