ನಮ್ಮ ದೇಶದ ಪುರಾತನ ದೇವಾಲಯಗಳ ಹಿಂದೆ ಹತ್ತು ಹಲವು ರಹಸ್ಯಗಳು, ಪವಾಡಗಳು ಅಡಗಿವೆ. ಸಾಮಾನ್ಯವಾಗಿ ಭಾರತೀಯರು ದೇವಾಲಯಗಳನ್ನು ನಿರ್ಮಿಸುವುದು ನಮಗೆ ಗೊತ್ತು. ಆದರೆ, ಒಬ್ಬ ಬ್ರಿಟಿಷ್ ಸೇನಾಧಿಕಾರಿ ಮತ್ತು ಅವರ ಪತ್ನಿ ಸೇರಿ ಶಿವನ ದೇವಾಲಯವನ್ನು ಪುನರ್ನಿರ್ಮಿಸಿದ ಕಥೆ ನಿಮಗೆ ಗೊತ್ತೇ?

Mahadev Temple – ದೇವಾಲಯದ ಕಥೆ ಏನು?
ಕೇಳಲು ಸಿನಿಮೀಯ ಎನಿಸಿದರೂ, ಮಧ್ಯಪ್ರದೇಶದ ಅಗರ ಮಾಲ್ವಾ ಜಿಲ್ಲೆಯಲ್ಲಿರುವ ಬೈಜನಾಥ ಮಹದೇವ ದೇವಾಲಯ ಇಂತಹದ್ದೊಂದು ಅದ್ಭುತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಒಬ್ಬ ಬ್ರಿಟಿಷ್ ಮಹಿಳೆ ತನ್ನ ಪತಿಯ ಪ್ರಾಣವನ್ನು ಉಳಿಸಿಕೊಳ್ಳಲು ಪರಶಿವನ ಮೊರೆ ಹೋದ ಆ ರೋಚಕ ಕಥೆ ಇಲ್ಲಿದೆ.
Mahadev Temple – ಯುದ್ಧಭೂಮಿಯಲ್ಲಿ ಸಿಲುಕಿದ್ದ ಪತಿ.. ಆತಂಕದಲ್ಲಿ ಪತ್ನಿ!
ಇದು 1879ರ ಕಾಲಘಟ್ಟ. ಬ್ರಿಟಿಷ್ ಸೇನೆಯ ಲೆಫ್ಟಿನೆಂಟ್ ಕರ್ನಲ್ ಸಿ. ಮಾರ್ಟಿನ್ ಅವರು ಅಫ್ಘಾನ್ ಯುದ್ಧಕ್ಕೆ ತೆರಳಿರುತ್ತಾರೆ. ಅತ್ತ ಅಗರ ಮಾಲ್ವಾದಲ್ಲಿದ್ದ ಅವರ ಪತ್ನಿಗೆ ಪತಿಯಿಂದ ಯಾವುದೇ ಪತ್ರ ಅಥವಾ ಮಾಹಿತಿ ಬಾರದೆ ಆತಂಕ ಶುರುವಾಗುತ್ತದೆ. ದಿನ ಕಳೆದಂತೆ ಆಕೆ ತನ್ನ ಪತಿ ಬದುಕಿದ್ದಾರೋ ಇಲ್ಲವೋ ಎಂಬ ಭಯಕ್ಕೆ ಒಳಗಾಗುತ್ತಾರೆ.
ಒಂದು ದಿನ ಕುದುರೆ ಸವಾರಿ ಮಾಡುತ್ತಿದ್ದಾಗ ಆಕೆಗೆ ಪಾಳುಬಿದ್ದ ಸ್ಥಿತಿಯಲ್ಲಿದ್ದ ಬೈಜನಾಥ ಮಹದೇವ ದೇವಾಲಯ ಕಾಣಿಸುತ್ತದೆ. ಅಲ್ಲಿ ನಡೆಯುತ್ತಿದ್ದ ಹಾರತಿ ಮತ್ತು ಮಂತ್ರಘೋಷಗಳು ಆಕೆಯನ್ನು ಆಕರ್ಷಿಸುತ್ತವೆ. ತನ್ನ ಸಂಕಷ್ಟವನ್ನು ಅಲ್ಲಿನ ಪೂಜಾರಿಗಳ ಬಳಿ ಹೇಳಿಕೊಂಡಾಗ, ಅವರು 11 ದಿನಗಳ ಕಾಲ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಲು ಸೂಚಿಸುತ್ತಾರೆ. “ಶಿವನು ಭಕ್ತರ ಸಂಕಷ್ಟವನ್ನು ಖಂಡಿತ ದೂರ ಮಾಡುತ್ತಾನೆ” ಎಂಬ ಪೂಜಾರಿಗಳ ಮಾತನ್ನು ನಂಬಿದ ಆ ಬ್ರಿಟಿಷ್ ಮಹಿಳೆ, ಭಕ್ತಿಯಿಂದ ಶಿವನ ಆರಾಧನೆ ಆರಂಭಿಸುತ್ತಾರೆ.
Mahadev Temple – ಪ್ರತ್ಯಕ್ಷನಾದ ತ್ರಿಶೂಲಧಾರಿ ಯೋಗಿ!
ಪತ್ನಿಯ ಪ್ರಾರ್ಥನೆ ವ್ಯರ್ಥವಾಗಲಿಲ್ಲ! ಹನ್ನೊಂದು ದಿನಗಳ ಮಂತ್ರ ಪಠಣ ಮುಗಿಯುವ ಹೊತ್ತಿಗೆ ಮಾರ್ಟಿನ್ ಅವರಿಂದ ಪತ್ರವೊಂದು ಬರುತ್ತದೆ. ಆ ಪತ್ರದಲ್ಲಿದ್ದ ವಿಷಯ ಓದಿ ಆಕೆ ಸ್ತಬ್ದರಾಗುತ್ತಾರೆ.
ಯುದ್ಧ ಭೂಮಿಯಲ್ಲಿ ಶತ್ರು ಸೈನಿಕರು ಮಾರ್ಟಿನ್ ಅವರನ್ನು ಸುತ್ತುವರಿದು ಸಾವು ಖಚಿತ ಎನ್ನುವ ಕ್ಷಣದಲ್ಲಿ, ಹುಲಿ ಚರ್ಮ ಧರಿಸಿದ, ಕೈಯಲ್ಲಿ ತ್ರಿಶೂಲ ಹಿಡಿದಿದ್ದ ದೀರ್ಘ ಜಟಾಧಾರಿ ಯೋಗಿಯೊಬ್ಬರು ಪ್ರತ್ಯಕ್ಷರಾದರಂತೆ. ಆ ಯೋಗಿ ಕ್ಷಣಾರ್ಧದಲ್ಲಿ ಶತ್ರುಗಳನ್ನು ಹತೋಟಿ ಮಾಡಿದ್ದಲ್ಲದೆ, ಮಾರ್ಟಿನ್ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆತಂದರಂತೆ. ಹೋಗುವಾಗ ಆ ಯೋಗಿ ಮಾರ್ಟಿನ್ ಅವರ ಬಳಿ, “ನಿನ್ನ ಪತ್ನಿಯ ಭಕ್ತಿಯ ಪ್ರಾರ್ಥನೆಯೇ ನಿನ್ನನ್ನು ಕಾಪಾಡಲು ನನ್ನನ್ನು ಇಲ್ಲಿಗೆ ಕರೆತಂದಿದೆ” ಎಂದು ಹೇಳಿದ್ದರಂತೆ!
Mahadev Temple – ಕೃತಜ್ಞತೆಯಾಗಿ ದೇವಾಲಯದ ಪುನರ್ ನಿರ್ಮಾಣ
ಯುದ್ಧ ಮುಗಿಸಿ ಮರಳಿ ಬಂದ ಮಾರ್ಟಿನ್ ದಂಪತಿಗಳು ಈ ಪವಾಡದಿಂದ ಶಿವನ ಪರಮ ಭಕ್ತರಾದರು. ತಾವು ಮಾಡಿಕೊಂಡ ಹರಕೆಯಂತೆ, 1883ರಲ್ಲಿ ಅಂದಿನ ಕಾಲಕ್ಕೆ ಬರೋಬ್ಬರಿ 15,000 ರೂಪಾಯಿ ವೆಚ್ಚ ಮಾಡಿ ಪಾಳುಬಿದ್ದಿದ್ದ ಬೈಜನಾಥ ದೇವಾಲಯವನ್ನು ಭವ್ಯವಾಗಿ ಪುನರ್ನಿರ್ಮಿಸಿದರು. ಇಂದಿಗೂ ದೇವಾಲಯದ ಗೋಡೆಯ ಮೇಲಿರುವ ಶಿಲಾಶಾಸನಗಳು ಈ ಇತಿಹಾಸಕ್ಕೆ ಸಾಕ್ಷಿಯಾಗಿವೆ.

ಬ್ರಿಟಿಷ್ ದಂಪತಿಗಳು ತಮ್ಮ ಅಧಿಕಾರ ಮುಗಿಸಿ ಇಂಗ್ಲೆಂಡ್ಗೆ ಮರಳಿದ ಮೇಲೂ ಸಹ ತಮ್ಮ ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಜೀವಿತಾವಧಿಯವರೆಗೆ ಪೂಜಿಸುತ್ತಿದ್ದರು ಎಂದು ಹೇಳಲಾಗುತ್ತದೆ. Read this also : ನಿಮ್ಮ ಮನೆಯಲ್ಲಿ ಬೆಳ್ಳಿಯ ಶಿವಲಿಂಗವಿದೆಯೇ? ಇದರ ಪವಾಡ ತಿಳಿದರೆ ಇಂದೇ ತರುತ್ತೀರಿ…!
Mahadev Temple – ಬೈಜನಾಥ ಮಹದೇವ ದೇವಾಲಯಕ್ಕೆ ಭೇಟಿ ನೀಡುವುದು ಹೇಗೆ?
ಬಾಣಗಂಗಾ ನದಿಯ ದಡದಲ್ಲಿರುವ ಈ ಸುಂದರ ದೇವಾಲಯವು ಪ್ರವಾಸಿಗರನ್ನು ಮತ್ತು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.
- ವಿಮಾನ ಮಾರ್ಗ: ಇಂದೋರ್ನ ದೇವಿ ಅಹಲ್ಯಾಬಾಯಿ ಹೋಲ್ಕರ್ ವಿಮಾನ ನಿಲ್ದಾಣ (126 ಕಿ.ಮೀ).
- ರೈಲು ಮಾರ್ಗ: ಉಜ್ಜಯಿನಿ ರೈಲ್ವೆ ನಿಲ್ದಾಣ (68 ಕಿ.ಮೀ).
- ರಸ್ತೆ ಮಾರ್ಗ: ಉಜ್ಜಯಿನಿ, ಇಂದೋರ್ ಮತ್ತು ಭೋಪಾಲ್ನಿಂದ ಬಸ್ ಸೌಲಭ್ಯವಿದೆ.
ಗಮನಿಸಿ: ಈ ಮೇಲಿನ ಮಾಹಿತಿಯು ಲಭ್ಯವಿರುವ ಐತಿಹಾಸಿಕ ದಾಖಲೆಗಳು ಮತ್ತು ಸ್ಥಳೀಯ ನಂಬಿಕೆಗಳ ಆಧಾರದ ಮೇಲೆ ನೀಡಲಾಗಿದೆ.
