ಸಾಮಾನ್ಯವಾಗಿ ರಸ್ತೆಯಲ್ಲಿ ಪೊಲೀಸರನ್ನು ಕಂಡರೆ ಸಾಕು ವಾಹನ ಸವಾರರು (Helmet Awareness) ದಂಡ ಕಟ್ಟಬೇಕಲ್ಲಾ ಎಂದು ಭಯಪಡುತ್ತಾರೆ. ಆದರೆ, ಗುಡಿಬಂಡೆಯಲ್ಲಿ ದೃಶ್ಯ ಬೇರೆಯೇ ಆಗಿತ್ತು. ತಾಲೂಕಿನಾದ್ಯಂತ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ, ಪೊಲೀಸರು ದಂಡದ ಬದಲು ‘ಗುಲಾಬಿ ಹೂ’ ನೀಡುವ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದ್ದಾರೆ. ಡಿಸೆಂಬರ್ 12 ರಿಂದ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುಡಿಬಂಡೆ ಪೊಲೀಸ್ ಇಲಾಖೆ ವತಿಯಿಂದ ವಿಶಿಷ್ಟವಾದ ಬೈಕ್ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Helmet Awareness – ಪೆರೇಸಂದ್ರದಿಂದ ಗುಡಿಬಂಡೆಯವರೆಗೆ ಬೈಕ್ ರ್ಯಾಲಿ
ಗುಡಿಬಂಡೆ ಪೊಲೀಸ್ ವೃತ್ತ ನಿರೀಕ್ಷಕರಾದ (ಸಿಪಿಐ) ಮುನಿರಾಜು ಅವರ ನೇತೃತ್ವದಲ್ಲಿ ನಡೆದ ಈ ಬೈಕ್ ರ್ಯಾಲಿಯು ಪೆರೇಸಂದ್ರ ಪೊಲೀಸ್ ಠಾಣೆಯಿಂದ ಆರಂಭವಾಯಿತು. ಅಲ್ಲಿಂದ ಮಂಡಿಕಲ್ಲು ಸೇರಿದಂತೆ ಪ್ರಮುಖ ಗ್ರಾಮಗಳ ಮೂಲಕ ಸಂಚರಿಸಿದ ಜಾಥಾ, ಅಂತಿಮವಾಗಿ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಬಂದು ತಲುಪಿತು. ರಸ್ತೆಯುದ್ದಕ್ಕೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಘೋಷಣೆಗಳನ್ನು ಕೂಗುವ ಮೂಲಕ ಎಚ್ಚರಿಸಲಾಯಿತು.
Helmet Awareness – “ಹಾಲು ತರಲು ಹೋಗ್ತಿದ್ದೀನಿ ಅನ್ನೋ ನೆಪ ಬೇಡ”: ಖಡಕ್ ಎಚ್ಚರಿಕೆ
ಇದೇ ವೇಳೆ ಮಾತನಾಡಿದ ವೃತ್ತ ನಿರೀಕ್ಷಕ ಮುನಿರಾಜು ಅವರು, ಸವಾರರಿಗೆ ಬುದ್ಧಿಮಾತು ಹೇಳಿದ್ದಲ್ಲದೆ, ಖಡಕ್ ಎಚ್ಚರಿಕೆಯನ್ನೂ ನೀಡಿದರು. “ನಾನು ಹೊಲಕ್ಕೆ ಹೋಗುತ್ತಿದ್ದೇನೆ, ಪಕ್ಕದ ಅಂಗಡಿಗೆ ಹಾಲು ತರಲು ಹೋಗುತ್ತಿದ್ದೇನೆ ಎಂಬ ಸಬೂಬುಗಳನ್ನು ನಾವು ಇನ್ಮುಂದೆ ಕೇಳುವುದಿಲ್ಲ. ಅಪಘಾತಗಳು ಹೇಳಿ ಕೇಳಿ ಬರುವುದಿಲ್ಲ. ಅದು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಸಂಭವಿಸಬಹುದು. ನಿಮ್ಮ ಮನೆಯಲ್ಲಿ ನಿಮ್ಮನ್ನು ನಂಬಿಕೊಂಡಿರುವ ಕುಟುಂಬವಿದೆ, ಅವರಿಗಾಗಿ ನಿಮ್ಮ ಪ್ರಾಣ ಉಳಿಸಿಕೊಳ್ಳಿ. ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ,” ಎಂದು ಸವಾರರಲ್ಲಿ ಕಳಕಳಿಯ ಮನವಿ ಮಾಡಿದರು. Read this also : ಬೈಕ್ ಸವಾರರೇ ಎಚ್ಚರ! ನಾಳೆಯಿಂದ ಹೆಲ್ಮೆಟ್ ಇಲ್ಲದಿದ್ದರೆ ದಂಡ ಗ್ಯಾರಂಟಿ ….!

Helmet Awareness – ಸಾಥ್ ನೀಡಿದ ಶಾಲಾ ಮಕ್ಕಳು ಮತ್ತು ಸಿಬ್ಬಂದಿ
ಈ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಗುಡಿಬಂಡೆ ಪಿಎಸ್ಐ ಗಣೇಶ್, ಪೆರೇಸಂದ್ರ ಠಾಣೆಯ ಪಿಎಸ್ಐ ಗುಣವತಿ, ಎಎಸ್ಐಗಳಾದ ಅಮರೇಶ್ ಬಾಬು, ಆನಂದ್, ಹನುಮಂತಪ್ಪ ಹಾಗೂ ಎರಡೂ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು. ವಿಶೇಷವೆಂದರೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಈ ಜಾಥಾದಲ್ಲಿ ಪಾಲ್ಗೊಂಡು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.
