Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವೀರ ಮಹಿಳೆ ಒನಕೆ ಓಬವ್ವ ಜಯಂತಿ ಮತ್ತು ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

Local News – ಓಬವ್ವನ ಸಾಹಸ, ಇಂದಿನ ಮಹಿಳೆಯರಿಗೆ ಪ್ರೇರಣೆ
ಈ ವೇಳೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ನರಸಿಂಹಮೂರ್ತಿ ಶತ್ರುಗಳು ಚಿತ್ರದುರ್ಗ ಕೋಟೆಗೆ ನುಗ್ಗಿದಾಗ ಅದನ್ನು ನೋಡಿ ಭಯಪಡದೇ ಒನಕೆಯಿಂದ ಹೊಡೆದು ಹೊಡೆದು ಸಾಯಿಸಿ ನಾಡಿನ ಪ್ರೇಮ ಮೆರೆದ ವೀರ ವನಿತೆ ಒನಕೆ ಓಬ್ಬವ್ವನ ಧೈರ್ಯ ಸಾಹಸಗಳು ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು. ಚಿತ್ರದುರ್ಗ ಕೋಟೆಯನ್ನು ಕಾಯುತ್ತಿದ್ದ ತನ್ನ ಪತಿ ಊಟಕ್ಕೆಂದು ಮನೆಗೆ ಹೋಗಿದ್ದಾಗ, ನಿಜಾಮರು ಸುರಂಗದ ಮೂಲಕ ಕೋಟೆಯ ಒಳಗೆ ನುಗ್ಗುತ್ತಿರುತ್ತಾರೆ. ಅದನ್ನು ಕಂಡ ಓಬವ್ವ ತನ್ನ ಪತಿಗೆ ಹೇಳುವಷ್ಟರಲ್ಲಿ ಶತ್ರುಗಳು ನುಗ್ಗಿಬಿಡುತ್ತಾರೆ ಎಂದು ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು, ಸುರಂಗ ಮಾರ್ಗದಿಂದ ಬರುತ್ತಿದ್ದ ಶತ್ರು ಸೈನಿಕರನ್ನು ಒಡೆದು ಸಾಯಿಸುತ್ತಾಳೆ. ಒಬ್ಬವ್ವನ ಈ ಧೈರ್ಯ ಸಾಹಸವನ್ನು ಇಂದಿನ ಹೆಣ್ಣು ಮಕ್ಕಳು ಅಳವಡಿಸಿಕೊಳ್ಳಬೇಕೆಂದರು.

Local News – ಶಿಕ್ಷಣ ಕ್ರಾಂತಿಯ ಹರಿಕಾರ: ಮೌಲಾನಾ ಆಜಾದ್ ಕೊಡುಗೆ ಅನನ್ಯ
ಇದೇ ಸಮಯದಲ್ಲಿ ಮೌಲಾನ ಅಬುಲ್ ಕಲಾಂ ಆಜಾದ್ ರವರ ಕುರಿತು ಮುಖ್ಯ ಭಾಷಣಕಾರರಾಗಿ ಮಾತನಾಡಿದ ಪತ್ರಕರ್ತ ರಾಜಶೇಖರ್, ಎಷ್ಟೇ ನಾಗರೀಕತೆ ಬೆಳೆದರೂ ಇಂದಿಗೂ ಕೂಡ ರಾಜ್ಯದ ಅನೇಕ ಭಾಗಗಳಲ್ಲಿ ಮೂಡನಂಬಿಕೆಗಳು ಜೀವಂತವಾಗಿದೆ. ಈ ಮೂಡನಂಬಿಕೆಗಳನ್ನು ತೊಡೆದು ಹಾಕಲು ಎಲ್ಲರೂ ಶಿಕ್ಷಣ ಪಡೆಯಬೇಕು. ಮೌಲಾನಾ ಆಜಾದ್ ರವರು ಶಿಕ್ಷಣ ಮಂತ್ರಿಗಳಾಗಿ ದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದಂತಹವರು. ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಿದ ಮೊದಲ ವ್ಯಕ್ತಿ ಎಂದರೇ ತಪ್ಪಾಗಲಾರದು. ಶಿಕ್ಷಣ ಕ್ಷೇತ್ರಕ್ಕೆ ಡಾ.ಮೌಲಾನಾ ಅಬುಲ್ ಕಲಾಂ ಅಜಾದ್ ರವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಶ್ರಮದಿಂದ ಇಂದು ಅನೇಕರಿಗೆ ಶಿಕ್ಷಣ ದೊರೆತಿದೆ ಎಂದರೇ ತಪ್ಪಾಗಲಾರದು. ಅವರ ಜಯಂತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.

Local News – ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ ಇಒ ನಾಗಮಣಿ, ಬಿಇಒ ಕೃಷ್ಣಕುಮಾರಿ, ಸರ್ಕಾರಿ ನೌಕರರ ಸಂಘದ ಮುನಿಕೃಷ್ಣಪ್ಪ, ಕೃಷಿ ಇಲಾಖೆಯ ಕೇಶವರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಚಲವಾದಿ ಸಂಘದ ತಾಲೂಕು ಅಧ್ಯಕ್ಷ ಚಿಕ್ಕನರಸಿಂಹಪ್ಪ, ಎಸ್.ಸಿ-ಎಸ್.ಟಿ ನೌಕರರ ಸಂಘದ ಶ್ರೀರಾಮಪ್ಪ, ಉರ್ದು ಸಾಹಿತ್ಯ ಪರಿಷತ್ ನ ಮೊಹಮದ್ ನಾಸೀರ್, ಗ್ಯಾರಂಟಿ ಅನುಷ್ಟಾನ ಸಮಿತಿಯ ಆದಿರೆಡ್ಡಿ, ಕೆಡಿಪಿ ಸದಸ್ಯ ರಿಯಾಜ್, ಕಸಾಪ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕೆ.ವಿ.ನಾರಾಯಣಸ್ವಾಮಿ, ಪರಿಮಳ, ಅಬ್ದುಲ್ ವಹಾಬ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಹಾಜರಿದ್ದರು. Read this also : ಎಲ್ಲರಿಗೂ ಕಾನೂನು ಅರಿವು ನೆರವು ನೀಡುವುದೇ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ: ನ್ಯಾ. ಸವಿತಾ ರುದ್ರಗೌಡ
Local News – ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಅಬುಲ್ ಕಲಾಂ ರವರ ಭಾವಚಿತ್ರದೊಂದಿಗೆ ಮೆರವಣಿಗೆ
ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅಂಗವಾಗಿ ಮೌಲಾನಾ ಅಬುಲ್ ಕಲಾಂ ಆಜಾದ್ ರವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಉರ್ದು ಸಾಹಿತ್ಯ ಪರಿಷತ್ ನ ಅಧ್ಯಕ್ಷ ನಾಸೀರ್, ಶಿಕ್ಷಣ ಕ್ಷೇತ್ರಕ್ಕೆ ಡಾ.ಮೌಲಾನಾ ಅಬುಲ್ ಕಲಾಂ ಅಜಾದ್ ರವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಶ್ರಮದಿಂದ ಇಂದು ಅನೇಕರಿಗೆ ಶಿಕ್ಷಣ ದೊರೆತಿದೆ ಎಂದರೇ ತಪ್ಪಾಗಲಾರದು. ಅವರ ಜಯಂತಿಯನ್ನು ಎಲ್ಲರೂ ಸೇರಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದರು.

ಈ ಸಮಯದಲ್ಲಿ ಬಿಇಒ ಕೃಷ್ಣಕುಮಾರಿ, ಉರ್ದು ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು, ಉರ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಷಫಿಉಲ್ಲಾ, ಮಕ್ಕಳು, ಶಿಕ್ಷಕರು, ಕೆಡಿಪಿ ಸದಸ್ಯ ರಿಯಾಜ್ ಪಾಷ, ಮುಖಂಡರಾದ ಅಬ್ದುಲ್ ವಹಾಬ್, ಚಾಂದ್ ಪಾಷ, ರಿಜ್ವಾನ್ ಸೇರಿದಂತೆ ಹಲವರು ಇದ್ದರು.
