Accident – ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರಿಗೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಿಂದ ತೆರಳಿದ್ದ ಭಕ್ತರಿಗೆ ಆಂಧ್ರಪ್ರದೇಶದಲ್ಲಿ ಈ ದುರಂತ ನಡೆದಿದೆ. ಈ ಘಟನೆಯಲ್ಲಿ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಘಟನೆ ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
Accident – ಎಲ್ಲಿ ಮತ್ತು ಹೇಗೆ ನಡೆಯಿತು?
ಈ ಹೃದಯ ಕಲಕುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಕುರುಬಲಕೋಟೆ ಮಂಡಲಂನ ಚೆನ್ನಾಮರ್ರಿ ಮಿಟ್ಟ ಬಳಿ ನಡೆದಿದೆ. ತಿರುಪತಿಯಿಂದ ಬಾಗೇಪಲ್ಲಿಗೆ ವಾಪಸ್ ಬರುತ್ತಿದ್ದ ಟಿಟಿ ವಾಹನಕ್ಕೆ, ವೇಗವಾಗಿ ಬಂದ ಅಪರಿಚಿತ ಬೃಹತ್ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದವರು ತೀವ್ರವಾಗಿ ಗಾಯಗೊಂಡಿದ್ದಾರೆ. Read this also : ಬೆಂಗಳೂರಿನಲ್ಲಿ ನಡುಕ ಹುಟ್ಟಿಸಿದ ಪ್ರೇಮ ಕೊಲೆ: ಕಸದ ಲಾರಿಯಲ್ಲಿ ಪತ್ತೆಯಾದ ಶವ, ಬಯಲಾಯ್ತು ಲಿವ್-ಇನ್ ಸಂಬಂಧದ ಕರಾಳ ಸತ್ಯ…!
Accident – ಬಾಗೇಪಲ್ಲಿಯ ಮೂರು ಮಂದಿ ಸಾವು
ಇನ್ನೂ ಈ ಅಪಘಾತದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮೇಘರ್ಷ್ (17), ಚರಣ್ (17) ಹಾಗೂ ಶ್ರಾವಣಿ (28) ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 9 ಜನರು ಗಂಭೀರವಾಗಿ ಗಾಯಗೊಂಡಿದ್ದು ಎಲ್ಲರನ್ನು ಮದನಪಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಹಾಗೂ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.