Anti Drug Awareness – ದೇಶದ ಅಭಿವೃದ್ದಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆ ತಡೆಗಟ್ಟುವುದು ಕೇವಲ ಸರ್ಕಾರ ಅಥವಾ ಅಧಿಕಾರಿಗಳ ಜವಾಬ್ದಾರಿ ಎಂಬ ಭಾವನೆಯನ್ನು ಬಿಟ್ಟು ಪ್ರತಿಯೊಬ್ಬರೂ ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಮುಂದಾಗಬೇಕು, ಜೊತೆಗೆ ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬಾರದು ಎಂದು ಗುಡಿಬಂಡೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್ ತಿಳಿಸಿದರು.
Anti Drug Awareness – ಮಾದಕ ವಸ್ತುಗಳ ಸೇವನೆ ಒಂದು ಅಪರಾಧ!
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಗುಡಿಬಂಡೆ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾದಕ ಮದ್ಯ ವಸ್ತುಗಳ ಸೇವನೆಯನ್ನು ನಿಯಂತ್ರಿಸದೆ ಹೋದರೆ ಆರೋಗ್ಯಕರ ಸಮಾಜ ನಿರ್ಮಾಣ ಕಷ್ಟ. ಇದನ್ನು ತಡೆಗಟ್ಟಲು ನಡೆಸುವ ಜಾಗೃತಿ ಆಂದೋಲನಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಮಾದಕ ವಸ್ತುಗಳ ಸಾಗಾಣೆಯಾಗಲಿ ಅಥವ ಮಾರಾಟವಾಗಲಿ ಮಾತ್ರ ಅಪರಾಧವಲ್ಲ, ಬದಲಿಗೆ ಅದರ ಸೇವನೆ ಕೂಡ ಅಪರಾಧ ಎಂಬುದನ್ನು ತಿಳಿದುಕೊಳ್ಳಬೇಕು. ಮುಖ್ಯವಾಗಿ ಈ ವ್ಯಸನಕ್ಕೆ ಯುವಜನತೆ ಹೆಚ್ಚಾಗಿ ಬಲಿಯಾಗುತ್ತಿರುವುದು ದೇಶದ ಅಭಿವೃದ್ದಿಗೆ ಮಾರಕವಾಗುತ್ತಿದೆ.
Anti Drug Awareness -ಮಾದಕ ವಸ್ತುಗಳ ಮಾರಾಟದ ಕುರಿತು ಮಾಹಿತಿ ನೀಡಿ
ಇಂದಿನ ಯುವಕರೇ ನಾಳಿನ ಪ್ರಜೆಗಳು ಎಂಬುದನ್ನು ಮರೆಯಬಾರದು. ದೇಶವು ಯುವಜನತೆಯಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗದೇ ಓದಿನ ಕಡೆಗೆ ಗಮನ ಹರಿಸಬೇಕು. ಒಳ್ಳೆಯ ಸಾಧನೆ ಮಾಡಿ ದೇಶ ಸೇವೆ ಮಾಡಬೇಕು. ಸಾರ್ವಜನಿಕರು ತಮಗೆ ಮಾದಕ ವಸ್ತುಗಳ ಬಳಕೆ ಅಥವಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.
Anti Drug Awareness – ದುಶ್ಚಟಗಳಿಗೆ ದಾಸರಾಗಬೇಡಿ: ಟಿಪಿಒ ಮುರಳಿ
ಬಳಿಕ ಶಿಕ್ಷಣ ಇಲಾಖೆಯ ಟಿಪಿಒ ಮುರಳಿ ಮಾತನಾಡಿ, ಮೋಜು ಮಸ್ತಿಗಾಗಿ ಒಂದು ಬಾರಿ ಈ ಚಟಕ್ಕೆ ದಾಸರಾದರೇ, ಇಡೀ ಜೀವನವೇ ಹಾಳಾದಂತೆ. ಈ ವ್ಯಸನಕ್ಕೆ ಬಲಿಯಾದ ಅನೇಕ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಮುಖ್ಯವಾಗಿ ಯುವಜನತೆ ಹೆಚ್ಚಾಗಿ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದು ಮಾರಕವಾಗಿ ಪರಿಣಮಿಸಲಿದೆ. ಅಪ್ರಾಪ್ತ ವಯಸ್ಕರನ್ನು ತಂಬಾಕು ಉತ್ಪನ್ನಗಳನ್ನು ತರಲು ಅಂಗಡಿಗಳಿಗೆ ಕಳುಹಿಸುವುದು ಅಪರಾಧವಾಗಿದೆ.
ಅಂಗಡಿ ಮಾಲೀಕರು ಅಪ್ರಾಪ್ತರು ಖರೀದಿಸಲು ಬಂದರೇ ಅಂತಹವರಿಗೆ ಬುದ್ದಿ ಹೇಳುವ ಕೆಲಸ ಸಹ ಇಂದಿನ ದಿನಗಳಲ್ಲಿ ಅವಶ್ಯಕವಾಗಿ ಬೇಕಿದೆ. ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಹಾಗೂ ಟಿ.ವಿಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಸಹ ಇಂದಿನ ಕಾಲದಲ್ಲಿ ಅತ್ಯವಶ್ಯಕವಾಗಿದೆ ಎಂದರು.
Read this also : ಜುಲೈ 12 ರಂದು ನಡೆಯಲಿರುವ ಲೋಕ್ ಅದಾಲತ್ ಸದುಪಯೋಗ ಪಡಿಸಿಕೊಳ್ಳಲು ಕರೆ: ನ್ಯಾ.ಸವಿತಾ
Anti Drug Awareness – ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೊಲೀಸರು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಜಾಥ ನಡೆಸಿದರು. ಈ ವೇಳೆ ಪೊಲೀಸ್ ಇಲಾಖೆಯ ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.