Delhi Crime – ದೆಹಲಿಯ ಜ್ಯೋತಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮದುವೆಗೆ ಒಪ್ಪದ ಯುವತಿಯೊಬ್ಬಳನ್ನು ವ್ಯಕ್ತಿಯೊಬ್ಬ ಐದನೇ ಮಹಡಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಈ ಘಟನೆ ರಾಜಧಾನಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ಮೃತ ಯುವತಿಯನ್ನು ನೇಹಾ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ತೌಫಿಕ್ ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ತಾಂಡಾದಲ್ಲಿ ಆರೋಪಿ ತೌಫಿಕ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Delhi Crime – ಬುರ್ಖಾ ಧರಿಸಿ ಮನೆ ಪ್ರವೇಶ, ಟೆರೇಸ್ನಿಂದ ತಳ್ಳಿದ ಆರೋಪಿ
ಘಟನೆಯ ವಿವರಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿವೆ. ಆರೋಪಿ ತೌಫಿಕ್ ಬುರ್ಖಾ ಧರಿಸಿ ನೇಹಾಳ ಮನೆಗೆ ನುಗ್ಗಿದ್ದ. ನೇಹಾಳ ತಂದೆ ಆತನನ್ನು ತಡೆಯಲು ಪ್ರಯತ್ನಿಸಿದಾಗ, ಅವರನ್ನು ಪಕ್ಕಕ್ಕೆ ತಳ್ಳಿ ನೇರವಾಗಿ ಟೆರೇಸ್ಗೆ ಹೋಗಿದ್ದಾನೆ. ಆ ಸಮಯದಲ್ಲಿ ನೇಹಾ ಟೆರೇಸ್ನಲ್ಲಿ ನೀರಿನ ಟ್ಯಾಂಕ್ ಪರಿಶೀಲಿಸುತ್ತಿದ್ದಳು ಎನ್ನಲಾಗಿದೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ತೌಫಿಕ್ ನೇಹಾಳನ್ನು ಟೆರೇಸ್ನಿಂದ ಕೆಳಗೆ ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ನೇಹಾಳನ್ನು ಕೂಡಲೇ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
Delhi Crime – ಸಹೋದರ ಸಂಬಂಧ, ನಂತರ ಮದುವೆ ಒತ್ತಡ
ಈ ಪ್ರಕರಣದಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ತೌಫಿಕ್ ಮತ್ತು ನೇಹಾ ಮೂರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ನೇಹಾ ತೌಫಿಕ್ನನ್ನು ತನ್ನ ಸಹೋದರನಂತೆ ಕಾಣುತ್ತಿದ್ದು, ರಕ್ಷಾಬಂಧನದಂದು ಆತನಿಗೆ ರಾಖಿ ಕೂಡ ಕಟ್ಟಿದ್ದಳು ಎಂದು ತಿಳಿದುಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ತೌಫಿಕ್ ನೇಹಾಳನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ. ನೇಹಾ ಈ ಸಂಬಂಧವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಳು.
Read this also : ಮದುವೆಯಾದ ತಿಂಗಳಲ್ಲೇ ಶವವಾದ ಪತಿ, ಬ್ಯಾಂಕ್ ಉದ್ಯೋಗಿಯ ಜೊತೆಗಿನ ಅಕ್ರಮ ಸಂಬಂಧವೇ ಕೊಲೆಗೆ ಕಾರಣ?
Delhi Crime – ನೇಹಾ ಸಹೋದರಿಯಿಂದ ಗಂಭೀರ ಆರೋಪ
ನೇಹಾಳ ಸಹೋದರಿ ನೀಡಿರುವ ಹೇಳಿಕೆಯ ಪ್ರಕಾರ, ತೌಫಿಕ್ ಕಳೆದ ಒಂದು ತಿಂಗಳಿನಿಂದ ನೇಹಾಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಮದುವೆಯಾಗುವಂತೆ ಒತ್ತಾಯಿಸುವುದು ಮಾತ್ರವಲ್ಲದೆ, ಬೆದರಿಕೆಗಳನ್ನೂ ಹಾಕುತ್ತಿದ್ದ. ಘಟನೆ ನಡೆಯುವ ಕೆಲವೇ ದಿನಗಳ ಮೊದಲು, ನೇಹಾ ತನ್ನ ತಾಯಿಗೆ ಈ ಕಿರುಕುಳದ ಬಗ್ಗೆ ತಿಳಿಸಿದ್ದಳು ಎನ್ನಲಾಗಿದೆ. ಮೂಲತಃ ಉತ್ತರ ಪ್ರದೇಶದವನಾದ ತೌಫಿಕ್ ದೆಹಲಿಯ ಮಂಡೋಲಿಯಲ್ಲಿ ಕೆಲಸ ಮಾಡುತ್ತಿದ್ದ. ಅಪರಾಧವೆಸಗಿದ ನಂತರ ಸ್ಥಳದಿಂದ ಪರಾರಿಯಾಗಿದ್ದ ಆತನನ್ನು, ಪೊಲೀಸರು ರಾಂಪುರದಲ್ಲಿ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.